ಚನ್ನಸಂದ್ರ ಅಂಡರ್ ಪಾಸ್ ಅ’ವ್ಯವಸ್ಥೆ, ವಾಹನ ಸವಾರರ ಪರದಾಟ
Flooding Water in underpass at Channasandra Kadugodi
ಬೆಂಗಳೂರು : ಇಲ್ಲಿನ ಕಾಡುಗೋಡಿ ಚನ್ನಸಂದ್ರದ ರೈಲ್ವೆ ಗೇಟ್ ದಾಟಲು ಈ ಹಿಂದೆ ಘಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹೆಣಗಾಡಬೇಕಿತ್ತು, ಮೊದಲೇ ಕಿರಿದಾದ ರಸ್ತೆಯಾದ್ದರಿಂದ ಅರ್ಧ ಗಂಟೆ, ಒಮ್ಮೊಮ್ಮೆ ಒಂದು ತಾಸು ಕಾಯ ಬೇಕಿತ್ತು. ಆದರೆ ಅದು ಯಾವಾಗ ರೈಲ್ವೆ ಅಂಡರ್ ಪಾಸ್ ಕಾಮಕಾರಿ ಶುರುವಾಯ್ತೋ ಜನ ನಿಟ್ಟುಸಿರು ಬಿಟ್ಟಿದ್ದರು. ಇನ್ನಾದರೂ ಕಾಯುವ ಗೋಜು ತಪ್ಪಿತಲ್ಲ ಎಂದು ಹರ್ಷ ವ್ಯಕ್ತ ಪಡಿಸಿದ್ದರು.
ಸಾಧಾರಣ ಮಳೆಗೆ ಕೆರೆಯಾಯ್ತು ಚನ್ನಸಂದ್ರ ಅಂಡರ್ ಪಾಸ್
ನೆನ್ನೆ ಮೊನ್ನೆ ಸುರಿದ ಸಾಧಾರಣ ಮಳೆಗೆ, ಅಂಡರ್ ಪಾಸ್ ಪೂರ್ತಿ ನೀರಿನಿಂದ ಆವೃತ್ತಿಯಾಗಿದೆ. ವಾಹನಗಳು ಸಂಪೂರ್ಣ ಮುಳುಗುವಷ್ಟು ನೀರು ತುಂಬಿದ್ದು, ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಅಂಡರ್ ಪಾಸ್ ನಲ್ಲಿ ಶೇಖರಣೆಯಾಗಿರುವ ನೀರು ಅಲ್ಲಿಂದ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ರಾತ್ರೋ ರಾತ್ರಿ ಕೆರೆಯಂತೆ ಮಾರ್ಪಾಟಾಗಿದೆ.
ಚನ್ನಸಂದ್ರ ಅಂಡರ್ ಪಾಸ್ ಅವೈಜ್ಞಾನಿಕ ಕಾಮಗಾರಿ
ಕನ್ನಡ ನ್ಯೂಸ್ ಟುಡೇ ಜೊತೆ ಮಾತನಾಡಿದ ಸ್ಥಳೀಯ ವಾಸಿ ಮಂಜುನಾಥ್, “ರಾತ್ರಿ ವಾಹನ ಸವಾರರು ನೀರಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದರು, ಹಾಗೂ ಕೆಲ ವಾಹನಗಳಿಗೆ ನೀರು ನುಗ್ಗಿ ಕೆಟ್ಟು ನಿಂತಿದ್ದವು, ಇಷ್ಟೆಲ್ಲಾ ವೆಚ್ಚ ಮಾಡಿ ಅಂಡರ್ ಪಾಸ್ ನಿರ್ಮಾಣ ಮಾಡಿರುವುದೇನೋ ಸರಿ ಆದರೆ ಮಳೆ ಬಂದಾಗ ಆ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡದಿರುವುದು, ಅವೈಜ್ಞಾನಿಕ ಕಾಮಗಾರಿಯೇ ಸರಿ ಎಂದರು.
ಇನ್ನೂ, ಅಲ್ಲಿ ನೀರು ಶೇಖರಣೆ ಆಗಿರುವುದನ್ನು ತಿಳಿಯದ ಜನರು, ಅಲ್ಲಿಯ ತನಕ ಬಂದು ವಾಪಾಸ್ಸಾಗುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಕೆಲವರು ಅದೇ ನೀರಿನಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಆ ಭಾಗದಲ್ಲಿ ಹೆಚ್ಚಾಗಿ ಶಾಲೆಗಳಿರುವುದರಿಂದ ಈ ರೀತಿ ಸಾಧಾರಣ ಮಳೆಗೆ ಈ ಪರಿಸ್ಥಿತಿಯಾದರೆ ಜೋರು ಮಳೆಗೆ ಏನಾಗಬಹುದು ಎಂದು ಅಭಿಪ್ರಾಯಪಟ್ಟರು.
ಸಮಸ್ಯೆಯನ್ನ ಅರಿತ ಸಂಬಂಧಪಟ್ಟವರು ಇನ್ನಾದರೂ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತಾರಾ ಕಾದು ನೋಡಬೇಕಿದೆ..
Follow us On
Google News |