ಉತ್ತಮ ಶಾಲೆಗಳು, ಹಾಸ್ಟೆಲ್ಗಳಿದ್ದು ಪೂರ್ಣ ಪ್ರಮಾಣದ ವಿದ್ಯಾರ್ಥಿಗಳನ್ನು ದಾಖಲಿಸಿ – ಶ್ರೀಮಂತ ಬಾಳಾಸಾಹೇಬ ಪಾಟೀಲ
ಕೋಲಾರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಶಾಲೆಗಳು ಹಾಸ್ಟೆಲ್ಗಳಿದ್ದು ಪೂರ್ಣ ಪ್ರಮಾಣದ ವಿದ್ಯಾರ್ಥಿಗಳನ್ನು ದಾಖಲಿಸಲು ಕ್ರಮ ವಹಿಸುವಂತೆ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಬಾಳಾಸಾಹೇಬ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಾಂಶುಪಾಲರು ಮತ್ತು ಅಧಿಕಾರಿಗಳು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಜನರಿಗೆ ತಿಳಿಸಿ ಪೂರ್ಣ ಪ್ರಮಾಣದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಐಟಿಐ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಅಲ್ಪಸಂಖ್ಯಾತರು ಹೆಚ್ಚಿನ ಶಿಕ್ಷಿತರಾಗಿ ಸ್ವಾವಲಂಭಿಗಳಾಗಬೇಕು. ಹೊಸ ಜವಳಿ ನೀತಿಯಲ್ಲಿ ಟೆಕ್ಸ್ಟೈಲ್ಸ್ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಶೇ. 40-50 ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು. ಕೈಮಗ್ಗ ಮತ್ತು ವಿದ್ಯುತ್ ಕೈಮಗ್ಗಗಳಿಂದ ನೆಯ್ದ ಬಟ್ಟೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು.
ಇದರಿಂದ ಹೆಚ್ಚಿನ ಕೈಮಗ್ಗಗಳು ಸ್ಥಾಪನೆಯಾಗಿ ಉದ್ಯೋಗಗಳು ಸೃಷ್ಥಿಯಾಗುತ್ತವೆ. ವಿದ್ಯುತ್ ಕೈಮಗ್ಗದವರಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿಯು ಪಾರದರ್ಶಕವಾಗಿ ದೊರೆಯಬೇಕು ಎಂದು ಕೈಮಗ್ಗ ಮತು ಜವಳಿ ಇಲಾಖೆಯ ಉಪನಿರ್ದೇಶಕರಾದ ಸೌಮ್ಯ ಅವರಿಗೆ ಸೂಚಿಸಿದರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಮಾತನಾಡಿ, ಮುಳಬಾಗಿಲಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಿಲು ಅಗತ್ಯ ಭೂಮಿ ನೀಡಲಾಗುವುದು
ಬೇರೆ ರಾಜ್ಯಗಳಲ್ಲಿ ಯಾವ ರೀತಿ ಆನ್ಲೈನ್ ಮದ್ಯ ಮಾರಾಟವನ್ನು ಮಾಡಲಾಗುತ್ತಿದೆ ಎಂಬುವುದನ್ನು ತಜ್ಞರಿಂದ ಅಧ್ಯಯನ ನಡೆಸಿ ಮುಖ್ಯ ಮಂತ್ರಿಗಳಿಗೆ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ, ಬಟ್ಟೆ ನೇಕಾರಿಕೆಯಲ್ಲಿ ಆನ್ಲೈನ್ ತರಬೇತಿಗಳನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಬಟ್ಟೆ ಉದ್ಯಮವನ್ನು ಅಭಿವೃದ್ದಿ ಪಡೆಸಲು ಔಟ್ಲೆಟ್ ಅನ್ನು ನಿರ್ಮಿಸಲಾಗುವುದು. ಬಟ್ಟೆ ನೇಯ್ಗೆ ಕಾರ್ಖಾನೆಗಳು ಲಾಕ್ಡೌನ್ ಅವದಿಯಲ್ಲಿ ಮಾತ್ರ ಸ್ಥಗಿತಗೊಂಡಿದ್ದು ನಂತರ ಯಥಾ ಸ್ಥಿತಿಯಲ್ಲಿ ಪ್ರಾರಂಭವಾಗಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೆ.ಜಿ.ಎಫ್ ಶಾಸಕರಾದ ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಮೈಲಾರಪ್ಪ, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪನಿರ್ದೇಶಕರಾದ ಸೌಮ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Follow us On
Google News |