ಕೋಲಾರ : ಜಿಲ್ಲೆಯ 1085 ಶಾಲೆಗಳಲ್ಲಿ ವಾಟರ್ ಪಿಲ್ಟರ್ ಆಳವಡಿಕೆ
Water Filter Implementation of 1085 Schools in Kolar District
KNT [ Kannada News Today ] : Kolar
ಕೋಲಾರ : ಜಿಲ್ಲೆಯಲ್ಲಿ 1,085 ಶಾಲೆಗಳಲ್ಲಿ ವಾಟರ್ ಪಿಲ್ಟರ್ಗಳನ್ನು ಆಳವಡಿಕೆ ಮಾಡಲು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದು ಶೀಘ್ರದಲ್ಲಿ ವಾಟರ್ ಪಿಲ್ಟರ್ಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲು ಪ್ರತಿ ಜಿಲ್ಲಾ ಪಂಚಯತ್ ಸದಸ್ಯರಿಗೆ ಮೂರು ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಮುಳಬಾಗಿಲಿಗೆ 18 ಲಕ್ಷ, ಬಂಗಾರಪೇಟೆಗೆ 23 ಲಕ್ಷ, ಮಾಲೂರಿಗೆ 15 ಲಕ್ಷ, ಶ್ರೀನಿವಾಸಪುರಕ್ಕೆ 15 ಲಕ್ಷ, ಕೋಲಾರಕ್ಕೆ 29 ಲಕ್ಷ ರೂಗಳು ಸೇರಿದಂತೆ ಒಟ್ಟು 49 ಕಾಮಗಾರಿಗಳಿಗೆ 100 ಲಕ್ಷ ರೂಗಳು ಹಂಚಿಕೆಯಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬೋರ್ವೆಲ್ಗಳನ್ನು ಕೊರೆಸಬೇಕು ಹಾಗೂ ಪಂಚಾಯಿತಿಯಲ್ಲಿ ಬಳಕೆಗೆ ಬಾರದ ಪಂಪು, ಮೋಟರ್ ಇತರ ಸಾಮಗ್ರಿಗಳನ್ನು ಹರಾಜು ಮಾಡಬೇಕು. ಆದರಿಂದ ಬಂದ ಹಣವನ್ನು ಹೊಸ ಪಂಪ್ ಮತ್ತು ಮೋಟರ್ ಖರೀದಿ ಮಾಡುವ ಮೂಲಕ ಹಣವನ್ನು ಸದ್ಬಳಕೆ ಮಾಡಬೇಕು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ತುರ್ತು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷರಾದ ಯಶೋದಮ್ಮ ಕೃಷ್ಣ ಮೂರ್ತಿ ಅವರು ಮಾತನಾಡಿ, ಎಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ ಅಲ್ಲಿ ಬೋರ್ವೆಲ್ಗಳನ್ನು ಹಾಕಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೀರಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಕೆ.ಜಿ.ಹಳ್ಳಿ ಪಂಚಾಯತಿ ವ್ಯಾಪ್ತಿಯ ಊರುಗುರುಕಿ ಗ್ರಾಮದಲ್ಲಿ ಸುಮಾರು 4 ತಿಂಗಳಿನ ಹಿಂದೆ ಬೋರ್ವೆಲ್ ಕೊರೆಸಿದ್ದು, ಅದಕ್ಕೆ ಪಂಪ್ ಮತ್ತು ಮೋಟರ್ ಆಳವಡಿಸಿಲ್ಲ ಕೂಡಲೇ ಅಳವಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ ದರ್ಶನ್ ಅವರು ಮಾತನಾಡಿ, ಕೆ.ಸಿ ವ್ಯಾಲಿ ನೀರಿನಿಂದ ಜಿಲ್ಲೆಯಲ್ಲಿ 50 ಕೆರೆಗಳು ತುಂಬಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ 800 ರಿಂದ 1000 ಅಡಿಗಳಿಗೆ ನೀರು ದೊರೆಯುವುದರಿಂದ ಹಳೆಯ ಪಂಪ್ ಮೋಟರ್ಗಳು ಪುನಃ ಬಳಕೆಯಾಗುತ್ತದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ವಾಟರ್ ಪ್ಯೂರಿಫಿಕೇಶನ್ ಪ್ಲ್ಯಾಂಟ್ (wpp) ವರದಿಯ ಪ್ರಕಾರ ಶುದ್ಧ ಕುಡಿಯುವ ನೀರಿನ ಘಟಕದ ನೀರು ಸಂಪೂರ್ಣವಾಗಿ ಲವಣಾಂಶ ಮುಕ್ತ ನೀರು ಆಗಿರುವುದರಿಂದ ದೇಹಕ್ಕೆ ಬೇಕಾದ ಲವಣಾಂಶಗಳು ಸಿಗುವುದಿಲ್ಲ. ಆದ್ದರಿಂದ ಅತಿ ಅವಶ್ಯಕತೆ ಇರುವೆಡೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂಬ ಸೂಚನೆ ಇದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ಹಾಸ್ಟಲ್ಗಳ ಪಟ್ಟಿಯನ್ನು ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಾಲಾಜಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಾಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ವೆಂಕಟಾಚಲ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Web Title : Water Filter Implementation of 1085 Schools in Kolar District
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)
Follow us On
Google News |