ಅತ್ಯಾಚಾರಿಗಳನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ
( Kannada News ) ಗದಗ : ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಇಲ್ಲಿನ ಮುಳಗುಂದ ನಾಕಾದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ಅತ್ಯಾಚಾರಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲಿನ ಸರಕಾರ ತಕ್ಷಣ ದಲಿತ ಯುವತಿಯರಿಗೆ ರಕ್ಷಣೆ ಕೊಡಬೇಕು. ಅತ್ಯಾಚಾರಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವ ಬದಲು, ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ.
ರಾತ್ರೋರಾತ್ರಿ ಯುವತಿಯ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ರಾಷ್ಟ್ರಪತಿಗಳು ತಕ್ಷಣವೇ ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ, ಚಂದ್ರಶೇಖರ ಹರಿಜನ, ವಿಜಯ ಕಲ್ಮನಿ, ವಿಜಯ ಎಸ್. ಮುಳಗುಂದ, ನಿಂಗರಾಜ ದೊಡ್ಡಮನಿ, ಪ್ರಶಾಂತ ದಾಸರ, ರಮೇಶ ಕಡೇಮನಿ, ಮೈಲಾರಿ ಹಾದಿಮನಿ, ಗಣೇಶ ಹುಬ್ಬಳ್ಳಿ, ಭೀಮ್ ಆರ್ಮಿ ಅಧ್ಯಕ್ಷ ನಾಗಾರ್ಜುನ ಕಾಳೆ, ಮಹಾಂತೇಶ ಮ್ಯಾಗೇರಿ, ಸುರೇಶ ಚಲವಾದಿ, ಗುರು ಮುಳಗುಂದ, ಆಕಾಶ ಕೋಣಿಮನಿ, ಸೋಹಿಲ್ ನವಲಗುಂದ, ರಾಮು ವಾಲ್ಮೀಕಿ ಇತರರು ಭಾಗವಹಿಸಿದ್ದರು.
Follow us On
Google News |