ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಕಾಂಗ್ರೆಸ್ ಖಂಡನೆ
ಕ್ಷೇತ್ರದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಜನತೆ ಬೇಸತ್ತು ಹೋಗಿದ್ದಾರೆ ಎಂದು ಕಾಂಗ್ರೆಸ್ ಅಸಮಾಧಾನ.
ಶಿವಮೊಗ್ಗ : ಕ್ಷೇತ್ರದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ಕಾರ್ಯವೈಖರಿಗೆ ಜನತೆ ಬೇಸತ್ತು ಹೋಗಿದ್ದಾರೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಗೌಡ ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಶಾಸಕರ ಕಾರ್ಯವೈಖರಿಗೆ ತೃಪ್ತಿ ತರುತ್ತಿಲ್ಲ. ಜನತೆಗೆ ಸ್ಪಂದಿಸುವಲ್ಲಿಯೂ ವಿಫಲರಾಗಿದ್ದಾರೆ ಜೊತೆಗೆ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವಲ್ಲಿಯೂ ನಿರ್ಲಕ್ಷ್ಯದ ಧೋರಣೆ ತೋರುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕೊರೋನಾ ಯೋಧರಿಗೂ ಅನಗತ್ಯವಾಗಿ ಅಡ್ಡಿಯುಂಟು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ಷೇತ್ರವನ್ನು ದತ್ತು ಪಡೆಯುವ ಅವಶ್ಯಕತೆ ಇದೆ ಎಂದರು.
ಮುಖ್ಯಮಂತ್ರಿಗಳು ಎಲ್ಲಾ ಪಕ್ಷದ ಶಾಸಕರಿಗೂ ಕೊರೋನಾ ವಿರುದ್ಧದ ಕಾರ್ಯಾಚರಣೆಯಲ್ಲಿ ಕ್ಷೇತ್ರದಲ್ಲಿಯೇ ಇದ್ದು, ಸಮರ್ಪಕವಾಗಿ ನಿಭಾಯಿಸಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ ಎಂದ ಅವರು, ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಕೆಲ ಸಂಘ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಣಿಸಿಕೊಂಡ ಅಧಿಕಾರಿಗಳಿಗೆ ವಿನಾ ಕಾರಣ ತೊಂದೆರೆ ನೀಡುವ ಕಾರ್ಯವೂ ನಡೆಯುತ್ತಿದೆ ಎಂದು ಕೇಳಿಬರುತ್ತಿದೆ. ಒಟ್ಟಾರೆ ಜಿಲ್ಲೆಯನ್ನು ಹಸಿರು ಜೋನ್ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಕೊರೋನಾ ಸಂಕಷ್ಟದ ನಡುವೆಯೂ ಪಟ್ಟಣದ ಸರ್ವೆ 113ರಲ್ಲಿನ ಬಡವರಿಗೆ ಅನಾಗತ್ಯ ಕಿರುಕುಳ ನೀಡಲಾಗುತ್ತಿದೆ. ಖಾಲಿ ನಿವೇಶಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಕಾರ್ಯವೂ ನಡೆಯುತ್ತಿದೆ. ಇದು ಸಲ್ಲದು. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ 94ಸಿ ಮತ್ತು 94ಸಿಸಿ ಕಾಯ್ದೆಯಡಿ ಸರ್ಕಾರಿ ಜಾಗದಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕು ಪತ್ರ ನೀಡುವ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂದಿನ ಶಾಸಕರಾಗಿದ್ದ ಮಧು ಬಂಗಾರಪ್ಪ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿ ಜನತೆಗೆ ಹಕ್ಕು ಪತ್ರಗಳನ್ನು ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್, ಟೌನ್ ಅಧ್ಯಕ್ಷ ರಶೀದ್ ಹಿರೇಕೌಂಶಿ, ಪಪಂ ಸದಸ್ಯರಾದ ಶ್ರೀರಂಜನಿ ಪ್ರವೀಣ ಕುಮಾರ್, ಸುಲ್ತಾನ ಬೇಗಂ, ಆಫ್ರೀನ್ ಮೆಹಬೂಬ್ ಬಾಷಾ, ಪ್ರಮುಖರಾದ ಮೆಹಬೂಬ್ ಬಾಷಾ, ಸಿರಾಜುದ್ಧೀನ್, ಶಿವಪ್ಪ ಮಲ್ಲಾಪುರ, ಇತರರಿದ್ದರು.
Web Title : Congress claimed that Kumar Bangarappa is not working confidentiality
Follow us On
Google News |