ಬೆಂಗಳೂರು ಕೋಗಿಲು ಮನೆಗಳ ತೆರವು ವಿಚಾರ, ಅರ್ಹರಿಗೆ 11.2 ಲಕ್ಷ ವೆಚ್ಚದ ಮನೆ; ಸಿಎಂ ಘೋಷಣೆ
ಬೆಂಗಳೂರಿನ ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ಬಳಿಕ ಅರ್ಹ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿದ್ದು, 7 ಕಿಮೀ ದೂರದಲ್ಲಿ ತಲಾ 11.2 ಲಕ್ಷ ವೆಚ್ಚದ ಹೊಸ ಮನೆಗಳನ್ನು ಹೊಸ ವರ್ಷದಂದು ಹಂಚುವ ಗುರಿ ಇಟ್ಟುಕೊಂಡಿದೆ ಎಂದು ಸಿಎಂ ತಿಳಿಸಿದರು
- ಕೋಗಿಲು ಲೇಔಟ್ ತೆರವು ಬಳಿಕ ಅರ್ಹರಿಗೆ ಮನೆ ಘೋಷಣೆ
- ತಲಾ 11.2 ಲಕ್ಷ ರೂ ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ
- ಹೊಸ ವರ್ಷದಂದು ಮನೆ ಹಂಚಿಕೆ ಗುರಿ
ಬೆಂಗಳೂರು (Bengaluru): ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಬಳಿಕ ಉಂಟಾದ ವಿವಾದದ ನಡುವೆಯೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಅರ್ಹ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ, ಪರ್ಯಾಯವಾಗಿ ಹೊಸ ಮನೆಗಳನ್ನು (Housing Scheme) ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅರ್ಹರಿಗೆ 7 ಕಿಮೀ ದೂರದಲ್ಲಿ ಹೊಸ ಮನೆ
ಸಿಎಂ ಸಿದ್ದರಾಮಯ್ಯ (Karnataka CM Siddaramaiah) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಸುಮಾರು 167 ಮನೆಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿದೆ ಎಂದು ವಿವರಿಸಿದರು. ತೆರವುಗೊಳಿಸುವ ಮೊದಲು ನೋಟಿಸ್ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಅರ್ಹ ಕುಟುಂಬಗಳಿಗೆ ಸುಮಾರು 7 ಕಿಲೋಮೀಟರ್ ದೂರದಲ್ಲಿ ತಲಾ 11.2 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ಕೋಗಿಲು ಲೇಔಟ್ ಮನೆಗಳ ತೆರವು: ಪಾಕ್ ಆರೋಪ, ಭಾರತ ತಿರುಗೇಟು
ಹೊಸ ವರ್ಷದಂದು ಮನೆ ಹಸ್ತಾಂತರಕ್ಕೆ ಗುರಿ
ನಾಳೆ ಅಥವಾ ನಾಡಿದ್ದು ಸ್ಥಳ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಸಲ್ಲಿಸುವ ಪಟ್ಟಿ ಆಧರಿಸಿ ಅರ್ಹರನ್ನು ಗುರುತಿಸಲಾಗುತ್ತದೆ. ಬೈಯಪ್ಪನಹಳ್ಳಿ ಸರ್ವೆ ನಂಬರ್ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳನ್ನು ಹೊಸ ವರ್ಷದ ಆರಂಭದಲ್ಲೇ ವಿತರಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ಜಮೀರ್ ಒಪ್ಪಿಗೆ ನೀಡಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ
ಈ ವಿಷಯದಲ್ಲಿ ರಾಜಕೀಯ ಉದ್ದೇಶ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದು, ಮಾನವೀಯತೆ ಆಧಾರದ ಮೇಲೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಇಂತಹ ಒತ್ತುವರಿ ನಡೆಯದಂತೆ ತಹಶೀಲ್ದಾರ್ ಹಾಗೂ ವಿಎಗಳ ಜವಾಬ್ದಾರಿಯನ್ನು ನಿಗದಿಪಡಿಸಲಾಗುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯಾದ್ಯಂತ ಚಳಿ ಹಿಡಿತ ಬಿಗಿ! ಹೊಸ ವರ್ಷ ಸಂಭ್ರಮಕ್ಕೂ ಚಳಿ ಕಾಟ
ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ಸಿಎಂ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿದ್ದಾಗಿ ಹೇಳಿದರು. ಅಕ್ರಮ ಜಾಗದಲ್ಲಿ ಶೆಡ್ ನಿರ್ಮಿಸಿದ್ದರೂ, ಮಾನವೀಯ ದೃಷ್ಟಿಯಿಂದ ಅರ್ಹರಿಗೆ ಮನೆ ನೀಡಲಾಗುತ್ತದೆ. ಮುಂದಿನ ಮೂರು ದಿನಗಳಲ್ಲಿ ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಿ ದಾಖಲೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.



