ಆಟವಾಡುತ್ತಿದ್ದ ಬಾಲಕನ ಮೇಲೆ ಹಾದು ಹೊದ ಕಾರು! ಭಯಾನಕ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಇಂದೋರ್‌ನ ಶಾಂತಿ ನಿಕೇತನ ಕಾಲೋನಿಯಲ್ಲಿ ರಸ್ತೆ ಮೇಲೆ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹಾದುಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Car Runs Over Child in Indore: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಹೃದಯ ಕಲುಕುವಂತಹ ಘಟನೆ ನಡೆದಿದೆ. ಕಾಲೋನಿಯ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹಾದುಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ನಗರದ ಬಾಂಬೆ ಆಸ್ಪತ್ರೆ ಸಮೀಪದ ಶಾಂತಿ ನಿಕೇತನ ಕಾಲೋನಿಯಲ್ಲಿ ನಡೆದಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇಬ್ಬರು ಮಕ್ಕಳು ರಸ್ತೆಯಲ್ಲೇ ಆಟವಾಡುತ್ತಿದ್ದ ವೇಳೆ ಕಾರು ಆ ಕಡೆಗೆ ಬಂದಿತ್ತು.

ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ಕ್ಷಣ

ಸಾಕ್ಷ್ಯವಾಗಿ ಹೊರಬಂದ ಸಿಸಿಟಿವಿ ದೃಶ್ಯದಲ್ಲಿ ಕಾರು ನಿಧಾನವಾಗಿ ಕಾಲೋನಿಗೆ ಪ್ರವೇಶಿಸುವುದು ಕಾಣಿಸುತ್ತದೆ. ಅಷ್ಟರಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳಲ್ಲಿ ಒಬ್ಬನು ಸಮಯಕ್ಕೆ ಸರಿಯಾಗಿ ಪಕ್ಕಕ್ಕೆ ಸರಿದಿದ್ದಾನೆ.

ಆದರೆ ಮತ್ತೊಬ್ಬ ಬಾಲಕ ರಸ್ತೆ ಮಧ್ಯದಲ್ಲೇ ಉಳಿದಿದ್ದರಿಂದ ಕಾರು ಅವನ ಮೇಲೆ ಹಾದುಹೋಗಿದೆ. ಕಾರಿನ ವೇಗ ಹೆಚ್ಚು ಇರಲಿಲ್ಲವಾದರೂ, ಎರಡೂ ಚಕ್ರಗಳು ಬಾಲಕನ ಮೇಲೆ ಹಾದುಹೋಗಿರುವ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಆಶ್ಚರ್ಯಕರ ಸಂಗತಿಯೆಂದರೆ, ಕಾರು ಮುಂದೆ ಸಾಗಿದ ನಂತರ ಬಾಲಕ ಸ್ವತಃ ಎದ್ದು ಕುಳಿತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಘಟನೆ ಬಳಿಕ ಕಾಲೋನಿಯಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ಬಾಲಕನಿಗೆ ಚಿಕಿತ್ಸೆ

ಅಪಘಾತದ ತಕ್ಷಣ ಸ್ಥಳೀಯರು ಬಾಲಕನನ್ನು ಸಮೀಪದ ಬಾಂಬೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಆರಂಭಿಸಿದ್ದಾರೆ. ವೈದ್ಯರ ಪ್ರಕಾರ ಬಾಲಕನ ಎರಡು ಕಾಲುಗಳಲ್ಲಿ ಮುರಿತ (ಫ್ರ್ಯಾಕ್ಚರ್) ಕಂಡುಬಂದಿದ್ದು, ಚಿಕಿತ್ಸೆ ಮುಂದುವರಿದಿದೆ.

ಬಾಲಕನ ಸ್ಥಿತಿ ಸ್ಥಿರವಾಗಿದ್ದು ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚಾಲಕ ಬಂಧನ, ಕಾರು ವಶಕ್ಕೆ

ಘಟನೆ ನಂತರ ಕಾರು ಮಾಲೀಕನೇ ಸ್ವತಃ ಚಾಲಕನನ್ನು ಹಾಗೂ ಕಾರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಂದೋರ್ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ಮಾಹಿತಿ ಪ್ರಕಾರ, ಪೊಲೀಸರು ಕಾರನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ. ಅವನ ವಿರುದ್ಧ ಅಜಾಗರೂಕ ಚಾಲನೆ ಪ್ರಕರಣ ದಾಖಲಿಸಲಾಗಿದೆ.

ಕಾರು ಮಾಲೀಕರ ಮಾನವೀಯತೆ

ಈ ಘಟನೆ ನಂತರ ಕಾರು ಮಾಲೀಕ ಸಂಜಯ್ ಅಗ್ರವಾಲ್ ಜವಾಬ್ದಾರಿ ತೋರಿದ್ದಾರೆ. ಅವರು ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ವೆಚ್ಚವನ್ನು ಹೊರುವುದಾಗಿ ತಿಳಿಸಿದ್ದಾರೆ.

ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹಕರಿಸಿದ ಅವರ ನಡೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂದೋರ್ ಪೊಲೀಸರು ಅಪಘಾತದ ಸಂಪೂರ್ಣ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Related Stories