ತಂದೆಯನ್ನು ಹತ್ಯೆ ಮಾಡಿ, ಶವವನ್ನು ತುಂಡುಮಾಡಿ ಡ್ರಮ್ನಲ್ಲಿಟ್ಟು ಮಗನಿಂದ ಕ್ರೂರ ಕೃತ್ಯ
ಲಖ್ನೌನಲ್ಲಿ ತಂದೆಯೊಂದಿಗೆ ಜಗಳದ ಬಳಿಕ 21 ವರ್ಷದ ಪುತ್ರ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತುಂಡುಮಾಡಿ ಡ್ರಮ್ನಲ್ಲಿ ಮರೆಮಾಚಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲಖ್ನೌ: ಮನೆಯೊಳಗಿನ ಕಲಹ, ಭೀಕರ ಅಂತ್ಯ ಕಂಡ ಘಟನೆ ಉತ್ತರ ಪ್ರದೇಶದ ಲಖ್ನೌನಲ್ಲಿ ನಡೆದಿದೆ. ತಂದೆಯೊಂದಿಗೆ ನಡೆದ ಜಗಳದ ಬಳಿಕ 21 ವರ್ಷದ ಯುವಕ ತನ್ನ 50 ವರ್ಷದ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತರನ್ನು ಮಾನವೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕಾಣೆಯಾಗಿರುವ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಪುತ್ರ ಅಕ್ಷತ್ ಸಿಂಗ್ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಿದರು. ಆರಂಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತ, ಕೊನೆಗೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಕ್ರೂರ ಕೃತ್ಯ ಹೊರಬಿದ್ದದ್ದು ಹೇಗೆ?
ಜಗಳದ ವೇಳೆ ಕೋಪದಲ್ಲಿ ಗುಂಡು ಹಾರಿಸಿ ತಂದೆಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಪೊಲೀಸರಿಗೆ ಹೇಳಿದ್ದಾನೆ. ಪ್ರಕರಣ ಬಹಿರಂಗವಾಗಬಾರದೆಂದು ಶವವನ್ನು ತುಂಡುಮಾಡಿ, ಕೆಲವು ಭಾಗಗಳನ್ನು ಹೊರಗೆ ಎಸೆದಿದ್ದಾನೆ. ಉಳಿದ ಅವಶೇಷಗಳನ್ನು ಡ್ರಮ್ನಲ್ಲಿ ಹಾಕಿ ಮನೆಯ ಖಾಲಿ ಕೋಣೆಯಲ್ಲಿ ಮರೆಮಾಚಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಮನೆ ಪರಿಶೀಲನೆ ನಡೆಸಿ ಶವದ ಅವಶೇಷಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಫೊರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬ ಕಲಹದ ಹಿನ್ನೆಲೆ, ಶಸ್ತ್ರಾಸ್ತ್ರದ ಮೂಲ ಮತ್ತು ಪೂರ್ವ ಯೋಜನೆ ಇದ್ದಿತೇ ಎಂಬ ಕೋನದಲ್ಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.



