ಹೆಣ್ಣು ಮಗು ಎಂದು ಹಸುಗೂಸಿಗೆ ವಿಷ ನೀಡಿದ ತಂದೆ ಬಂಧನ
ಬೆಳಗಾವಿ ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ 15 ದಿನದ ಹೆಣ್ಣುಮಗು ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದೆ. ಹೆಣ್ಣು ಮಗು ಹುಟ್ಟಿದ ಅಸಮಾಧಾನದಿಂದ ತಂದೆಯೇ ವಿಷ ನೀಡಿ ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ನಡೆದ 15 ದಿನದ ಹಸುಗೂಸು ಸಾವಿನ ಪ್ರಕರಣಕ್ಕೆ ಈಗ ಅಚ್ಚರಿಯ ತಿರುವು ಸಿಕ್ಕಿದೆ. ಆರಂಭದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದ ಈ ಘಟನೆ, ಇದೀಗ ತನಿಖೆಯಲ್ಲಿ ಗಂಭೀರ ಅಪರಾಧವಾಗಿ ಹೊರಹೊಮ್ಮಿದೆ. ಹೆಣ್ಣು ಮಗು ಹುಟ್ಟಿದ ಅಸಮಾಧಾನದಿಂದ ತಂದೆಯೇ ವಿಷ ನೀಡಿ ಮಗುವಿನ ಜೀವ ತೆಗೆದುಕೊಂಡಿದ್ದಾನೆ ಎಂಬ ಆರೋಪ ಹೊರಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮರಾಯ ಚಿಪ್ಪಾಡೆ ಎಂಬ ವ್ಯಕ್ತಿಯನ್ನು ಕಾಕತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ ಶೀಲಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.
ಘಟನೆ ಹೇಗೆ ನಡೆದಿದೆ?
ಮಾರ್ಚ್ 17ರಂದು 15 ದಿನಗಳ ಹಿಂದೆ ಜನಿಸಿದ ಮಗು ಏಕಾಏಕಿ ಅಸ್ವಸ್ಥಗೊಂಡಿತ್ತು. ಕುಟುಂಬಸ್ಥರು ತಕ್ಷಣ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಪರಿಶೀಲಿಸುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಈ ಘಟನೆ ಕುಟುಂಬದಲ್ಲಿ ಆತಂಕ ಮತ್ತು ದುಃಖವನ್ನುಂಟು ಮಾಡಿತ್ತು.
ಪರಿವಾರದವರು ಮಗುವಿನ ಸಾವಿಗೆ ತಂದೆಯೇ ಕಾರಣ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಕರಣ ಮತ್ತಷ್ಟು ಗಂಭೀರವಾಗಿ ತಿರುಗಿತು.
ಹೆಣ್ಣು ಮಗು ಹುಟ್ಟಿದ ಅಸಮಾಧಾನ
ಮಾಹಿತಿಯ ಪ್ರಕಾರ, ಭೀಮರಾಯ ಮತ್ತು ಶೀಲಾ ದಂಪತಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಭೀಮರಾಯಗೆ ಗಂಡು ಮಗು ಬೇಕೆಂಬ ಆಸೆ ಹೆಚ್ಚು ಇದ್ದುದಾಗಿ ತಿಳಿದುಬಂದಿದೆ.
ಆದರೆ 15 ದಿನಗಳ ಹಿಂದೆ ಹೆಣ್ಣು ಮಗು ಹುಟ್ಟಿದ ಕಾರಣದಿಂದ ಆತ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಪತ್ನಿ ತವರು ಮನೆಯಲ್ಲಿದ್ದಾಗ ಮಗು ನೋಡಲು ಬಂದಿದ್ದ ಭೀಮರಾಯ, ಬಳಿಕ ಅಲ್ಲಿಂದ ತೆರಳಿದ ನಂತರ ಮಗು ಅಸ್ವಸ್ಥಗೊಂಡಿತ್ತು ಎಂಬ ಮಾಹಿತಿ ಕುಟುಂಬಸ್ಥರು ನೀಡಿದ್ದರು.
ವಿಷ ನೀಡಿದ ಶಂಕೆ
ಮಗುವಿನ ಸಾವಿನ ನಂತರ, ಹತ್ತಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕ ಔಷಧಿ ಮಗುವಿಗೆ ನೀಡಲಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಇದರಿಂದ ಪ್ರಕರಣ ಮತ್ತಷ್ಟು ಸಂಶಯಾಸ್ಪದವಾಗಿ ಮಾರ್ಪಟ್ಟಿತ್ತು.
ಮಗುವಿನ ಶವವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ತನಿಖೆ ಬಳಿಕ ಬಂಧನ
ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ನಡುವೆ ಆರೋಪ ಎದುರಿಸುತ್ತಿದ್ದ ಭೀಮರಾಯ ಕೆಲವು ಸಮಯ ನಾಪತ್ತೆಯಾಗಿದ್ದನು.
ಪೊಲೀಸರು ಬಲೆ ಬೀಸಿ ಹುಡುಕಾಟ ನಡೆಸಿದ ಬಳಿಕ ಕೊನೆಗೂ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.



