ಈಜು ಬರುತ್ತಿದ್ದರೂ ಕುಡಿದ ಅಮಲಿನಲ್ಲಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವು

ಹಾಸನ (Hassan): ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಅಜಿತ್ (30) ಮತ್ತು ಅಶೋಕ್ (35) ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೊಸ ವರ್ಷದ ಅಂಗವಾಗಿ ಬುಧವಾರ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಊರ ಹೊರಗಿನ ಕೆರೆಯ ಕಟ್ಟೆ ಮೇಲೆ ಕುಳಿತು ಕುಡಿಯುತ್ತಿದ್ದಾಗ ಕುಡಿದ ಅಮಲಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಗುರುವಾರ ಬೆಳಗ್ಗೆಯಾದರೂ ಮನೆಗೆ ಅವರು ಬಂದಿರಲಿಲ್ಲ. ಕುಟುಂಬ ಸದಸ್ಯರಿಗೆ ಅನುಮಾನ ಬಂದು, ಹುಡುಕಾಡಿದಾಗ ಕೆರೆಯ ಬಳಿ ಬೈಕ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ನೀರಿನಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈಜು ಬರುತ್ತಿದ್ದರೂ ಕುಡಿದ ಮತ್ತಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Hassan Tragedy: Two Youth Drown in Lake After New Year Celebration



