ಶಿವಮೊಗ್ಗ, ಬೆಂಗಳೂರು ವಿಮಾನ ಸೇವೆ ಸ್ಥಗಿತ: ಇಂಡಿಗೋ ನಿರ್ಧಾರ
ಪೈಲಟ್ ಕೊರತೆ ಹಾಗೂ ಡಿಜಿಸಿಎ ಹೊಸ ನಿಯಮಗಳ ಪರಿಣಾಮವಾಗಿ ಇಂಡಿಗೋ ಏರ್ಲೈನ್ಸ್ ಮೇ 1ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು (Bengaluru): ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಒಂದಾಗಿದೆ. ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo Flight) ತನ್ನ ಕೆಲವು ಪ್ರಾದೇಶಿಕ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮುಂದಾಗಿದೆ. ಅದರ ಭಾಗವಾಗಿ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆ ಮೇ 1ರಿಂದ ನಿಲ್ಲಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂಡಿಗೋ ಸಂಸ್ಥೆಯ ಬುಕ್ಕಿಂಗ್ ವ್ಯವಸ್ಥೆಯಲ್ಲೂ ಈ ಬದಲಾವಣೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಂಸ್ಥೆ ಏಪ್ರಿಲ್ 30ರವರೆಗೆ ಮಾತ್ರ ಟಿಕೆಟ್ (Flight Ticket) ಕಾಯ್ದಿರಿಸಲು ಅವಕಾಶ ನೀಡಿದ್ದು, ಮೇ 1ರಿಂದ ಈ ಮಾರ್ಗದಲ್ಲಿ ಯಾವುದೇ ಬುಕ್ಕಿಂಗ್ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
ಈ ನಿರ್ಧಾರದ ಹಿಂದೆ ತಾಂತ್ರಿಕ ಹಾಗೂ ನಿಯಮಾತ್ಮಕ ಕಾರಣಗಳಿವೆ ಎಂದು ವಿಮಾನಯಾನ ವಲಯದ ಮೂಲಗಳು ಹೇಳುತ್ತಿವೆ. ಇತ್ತೀಚೆಗೆ ವಿಮಾನ ಸುರಕ್ಷತೆ ಕುರಿತಾಗಿ ಡಿಜಿಸಿಎ (DGCA) ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಪೈಲಟ್ಗಳ ಕೆಲಸದ ಅವಧಿ ಮತ್ತು ವಿಮಾನ ನಿರ್ವಹಣೆ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕಾಗಿದೆ.
ಈ ಹೊಸ ನಿಯಮಗಳನ್ನು ಜಾರಿಗೆ ತರಲು ಏರ್ಲೈನ್ ಕಂಪನಿಗಳಿಗೆ ಒಂದು ವರ್ಷದ ಅವಧಿ ನೀಡಲಾಗಿದೆ. ಆದರೆ ಈ ನಿಯಮಗಳ ಅನುಷ್ಠಾನದ ನಡುವೆ ಕೆಲವು ಕಂಪನಿಗಳಿಗೆ ಪೈಲಟ್ ಕೊರತೆ ಎದುರಾಗಿರುವುದು ತಿಳಿದುಬಂದಿದೆ. ಇಂಡಿಗೋ ಸಂಸ್ಥೆಯೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದರಿಂದ ಸಣ್ಣ ನಗರಗಳಿಗೆ ನೀಡುತ್ತಿದ್ದ ATR ವಿಮಾನ ಸೇವೆಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಇಂಡಿಗೋ ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರತಿದಿನ ವಿಮಾನ ಸೇವೆ ನಡೆಸುತ್ತಿದೆ. ಆದರೆ ಕಂಪನಿಯು ಮೂರು ತಿಂಗಳ ಕಾಲ ಈ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ.
ಇದಲ್ಲದೆ ಮೇ ತಿಂಗಳ ಮಧ್ಯದಿಂದ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಇದು ಪ್ರಯಾಣಿಕರ ಸಂಚಾರ ಕಡಿಮೆ ಇರುವ ಆಫ್ ಸೀಸನ್ ಅವಧಿ ಆಗಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇತರೆ ವಿಮಾನ ಸೇವೆಗಳು ಮುಂದುವರಿಯುತ್ತಿವೆ. ಸ್ಟಾರ್ ಏರ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ ಪ್ರತಿದಿನ ವಿಮಾನಗಳನ್ನು ನಡೆಸುತ್ತಿದೆ. ಅದೇ ರೀತಿ ಸ್ಪೈಸ್ಜೆಟ್ ಕಂಪನಿಯೂ ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಚೆನ್ನೈಗೆ ಸೇವೆ ನೀಡುತ್ತಿದೆ.
ಆದರೆ ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ಶಿವಮೊಗ್ಗ-ಬೆಂಗಳೂರು ಮಾರ್ಗವೇ ಅತ್ಯಂತ ಪ್ರಮುಖವಾಗಿದೆ. ಈ ಸೇವೆ ತಾತ್ಕಾಲಿಕವಾಗಿ ನಿಲ್ಲುವುದರಿಂದ ಕೆಲವರಿಗೆ ಪ್ರಯಾಣದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



