ಚಿಕ್ಕಬಳ್ಳಾಪುರ: ಮಲಗಿದ್ದ ಗಂಡನ ಮೇಲೆ ಪತ್ನಿ ದಾಳಿ, ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಜಗಳದ ಬಳಿಕ ಪತ್ನಿ ಗಂಡನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಪತಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಕುಟುಂಬ ಕಲಹದ ಹಿನ್ನೆಲೆ ಗಂಭೀರ ಘಟನೆ ನಡೆದಿದೆ. ಪತಿ ಮತ್ತು ಪತ್ನಿ ನಡುವೆ ನಡೆದ ಜಗಳದ ಬಳಿಕ ಪತ್ನಿ ಗಂಡನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುನೀಂದ್ರ ಮತ್ತು ವರ್ಷಾ ಎಂಬ ದಂಪತಿ ಈ ಘಟನೆಗೆ ಸಂಬಂಧಿಸಿದವರು. ಮಧ್ಯರಾತ್ರಿ ಮನೆಯಲ್ಲೇ ಮಲಗಿದ್ದ ಗಂಡನ ಮೇಲೆ ಪತ್ನಿ ದಾಳಿ ನಡೆಸಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗಾಯಗೊಂಡ ಮುನೀಂದ್ರ ತಕ್ಷಣವೇ ಆಂಬುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರೀತಿ ಮದುವೆಯ ನಂತರ ಆರಂಭವಾದ ಕಲಹ
ಮುನೀಂದ್ರ ಮತ್ತು ವರ್ಷಾ ಐದು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿದ್ದರೂ ನಂತರ ದಂಪತಿಯ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗತೊಡಗಿದವು ಎಂದು ಕುಟುಂಬದವರು ತಿಳಿಸಿದ್ದಾರೆ.
ವಿಚ್ಛೇದನ ನೀಡುವಂತೆ ವರ್ಷಾ ಪದೇಪದೇ ಒತ್ತಾಯ ಮಾಡುತ್ತಿದ್ದಳು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಲಾಟೆ ತಾರಕಕ್ಕೇರಿದ ರಾತ್ರಿ
ಘಟನೆಯ ದಿನ ಬೆಳಿಗ್ಗೆ ಕೂಡ ದಂಪತಿಯ ನಡುವೆ ಜೋರಾಗಿ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ಮಧ್ಯರಾತ್ರಿ ಮತ್ತೆ ಗಲಾಟೆ ನಡೆದ ನಂತರ ಗಂಡ ಮಲಗಿದ್ದ ವೇಳೆ ಪತ್ನಿ ದಾಳಿ ನಡೆಸಿದ್ದಾಳೆ ಎಂಬ ಆರೋಪ ಹೊರಬಂದಿದೆ.
ಗಂಭೀರವಾಗಿ ಗಾಯಗೊಂಡ ಮುನೀಂದ್ರ ಸ್ವತಃ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಂತರ ಕುಟುಂಬದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.



