ಇರಾನ್–ಇಸ್ರೇಲ್ ಯುದ್ಧ ತೀವ್ರ! ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳು ರದ್ದು
ಇರಾನ್–ಇಸ್ರೇಲ್ ಯುದ್ಧ ತೀವ್ರವಾಗುತ್ತಿದ್ದಂತೆ ಪಶ್ಚಿಮ ಏಷ್ಯಾ ವಾಯುನೆಲೆ ಮುಚ್ಚಿದ್ದು, ಬೆಂಗಳೂರಿನಿಂದ ವಿದೇಶಕ್ಕೆ ತೆರಳುವ ಹಾಗೂ ಆಗಮಿಸುವ ಒಟ್ಟು 24 ವಿಮಾನಗಳು ರದ್ದಾಗಿವೆ; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆತಂಕ ಹೆಚ್ಚಾಗಿದೆ.

- ಬೆಂಗಳೂರು ವಿಮಾನ ರದ್ದು
- ಒಟ್ಟು 24 ವಿಮಾನಗಳ ಸಂಚಾರ ಸ್ಥಗಿತ
- ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಬೆಂಗಳೂರು (Bengaluru): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಇರಾನ್–ಇಸ್ರೇಲ್ ಸಂಘರ್ಷವು ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆಯೇ ಪರಿಣಾಮ ಬೀರಿದೆ. ವಾಯುನೆಲೆಗಳು ಮುಚ್ಚಲ್ಪಟ್ಟ ಹಿನ್ನೆಲೆ ಇಂದು ಒಟ್ಟು 24 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಂಡಿದೆ. ವಿದೇಶಕ್ಕೆ ತೆರಳಬೇಕಿದ್ದ 9 ವಿಮಾನಗಳು ಹಾಗೂ ವಿದೇಶದಿಂದ ಬರಬೇಕಿದ್ದ 15 ವಿಮಾನಗಳು ಸ್ಥಗಿತಗೊಂಡಿವೆ.
ಅಬುಧಾಬಿ, ಜಿದ್ದಾ, ದೋಹಾ, ದುಬೈ ಮತ್ತು ಬಹ್ರೇನ್ ಸೇರಿ ಮಧ್ಯಪ್ರಾಚ್ಯದ ಪ್ರಮುಖ ಗಮ್ಯಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳೇ ಹೆಚ್ಚು ಪರಿಣಾಮಕ್ಕೆ ಒಳಗಾಗಿವೆ. ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಖತಾರ್ ಏರ್ವೇಸ್ ಸೇರಿದಂತೆ ಹಲವು ಪ್ರಮುಖ ಏರ್ಲೈನ್ಸ್ಗಳು ತಾತ್ಕಾಲಿಕವಾಗಿ ತಮ್ಮ ಸೇವೆಗಳನ್ನು ನಿಲ್ಲಿಸಿರುವುದಾಗಿ ತಿಳಿಸಿವೆ.
ನಿಲ್ದಾಣದಲ್ಲಿ ಆತಂಕ – ಪ್ರಯಾಣಿಕರಿಗೆ ಸೂಚನೆ
ಬೆಳಿಗ್ಗೆಂದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ರದ್ದಾದ ವಿಮಾನಗಳ ಮಾಹಿತಿ ತಿಳಿದು ಗೊಂದಲಕ್ಕೊಳಗಾದರು. ಟಿಕೆಟ್ ಬುಕ್ ಮಾಡಿದ್ದವರಿಗೆ ಮರು ಬುಕ್ಕಿಂಗ್ (Rebooking) ಅಥವಾ ಪೂರ್ಣ ಹಣ ವಾಪಸ್ (Refund) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅನಿಶ್ಚಿತತೆ ಮುಂದುವರಿದಿರುವುದರಿಂದ ಹಲವರು ತಮ್ಮ ಮುಂದಿನ ಪ್ರಯಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣ ಆಡಳಿತ ಮಂಡಳಿ, ಪ್ರಯಾಣಿಕರು ವಿಮಾನದ ಸ್ಥಿತಿ (Flight Status) ಪರಿಶೀಲಿಸದೇ ನಿಲ್ದಾಣಕ್ಕೆ ಬಾರದು ಎಂದು ಮನವಿ ಮಾಡಿದೆ. ಸಹಾಯಕ್ಕಾಗಿ ವಿಶೇಷ ಹೆಲ್ಪ್ಡೆಸ್ಕ್ಗಳನ್ನೂ ತೆರೆಯಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ನೀಡಲಾಗುತ್ತಿದೆ.
ದುಬೈ, ಬಹ್ರೇನ್ನಲ್ಲಿ ಕನ್ನಡಿಗರು ಸಿಲುಕಿದ ವರದಿ
ಯುದ್ಧ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಒಟ್ಟು 100 ಮಂದಿ ಕನ್ನಡಿಗರು ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಳ್ಳಾರಿ, ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳವರು ಇದರಲ್ಲಿ ಸೇರಿದ್ದಾರೆ. ಅದೇ ರೀತಿ ಬಹ್ರೇನ್ನಲ್ಲಿ 9 ಮಂದಿ ಕರ್ನಾಟಕದವರು ತಂಗಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರು ತಮ್ಮವರ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ನೆರವು ನಿರೀಕ್ಷಿಸುತ್ತಿದ್ದಾರೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಹಾರಾಟಗಳು ಅನಿಶ್ಚಿತವಾಗಿರುವ ಸಾಧ್ಯತೆ ಇದೆ.



