ಬೆಂಗಳೂರು ಮಹಿಳೆ ದರ್ಪ, ಕಾಲಿನಿಂದ ಯುವಕನನ್ನು ಒದ್ದು ಹಲ್ಲೆ
ಬೆಂಗಳೂರು ನಗರದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಮಹಿಳೆ ಯುವಕರ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
Publisher: Kannada News Today (Digital Media)
- ಕಾರು ಪಾರ್ಕಿಂಗ್ ಗಲಾಟೆ ವಿಚಾರದಿಂದ ಹಲ್ಲೆ
- ಫುಡ್ ಡೆಲಿವರಿ ಬಾಯ್ ಪ್ರಕರಣದ ಬಳಿಕ ಮತ್ತೊಂದು ಘಟನೆ
- ಮಹಿಳೆ ವಿರುದ್ಧ NCR ದಾಖಲು
ಬೆಂಗಳೂರು (Bengaluru): ಫುಡ್ ಡೆಲಿವರಿ ಬಾಯ್ ಮೇಲಿನ ದಾಳಿಯ ಬೆನ್ನಲ್ಲೇ, ಬೆಂಗಳೂರು ನಗರದಲ್ಲಿ ಮತ್ತೊಂದು ಹಲ್ಲೆ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾರಿ, ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ, ಮಹಿಳೆ ಸಬ್ರೀನ್ ಕಾರು ಚಾಲಕ ಶಿವರಾಜ್ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸುತ್ತಿರುವ ದೃಶ್ಯಗಳಿವೆ. ಈ ವೇಳೆ ಅಲ್ಲಿ ಹಾಜರಿದ್ದವರು ಜಗಳ ಬಗೆಹರಿಸಲು ಪ್ರಯತ್ನಿಸಿದರೂ ಸಬ್ರೀನ್ ಮಾತ್ರ ತನ್ನ ದರ್ಪ ತೋರುತ್ತಲೇ ಇದ್ದರು. ಘಟನೆ ನಡೆದಾಗ ವಿಡಿಯೋ ತೆಗೆಯುತ್ತಿದ್ದ ದರ್ಶನ್ ಎಂಬುವರ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆ ಪ್ರಕರಣದ ಸಂಬಂಧ ಕಾರು ಚಾಲಕ ಶಿವರಾಜ್ ಮತ್ತು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಿಸಿದ್ದಾರೆ. ಪೊಲೀಸರು ಸಬ್ರೀನ್ ಅವರನ್ನು ಕರೆಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಅವರು ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವಿಟ್ಟರ್ (ಈಗಿನ ಎಕ್ಸ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಾರು ಪಾರ್ಕಿಂಗ್ ಸಂಬಂಧಿತ ತಕರಾರು ಕಾರಣ ಈ ಗಲಾಟೆ ನಡೆದಿರುವುದಾಗಿ ವಿವರಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಹಿಳೆ ಸಬ್ರೀನ್ ವೃತ್ತಿಯಲ್ಲಿ ಪೊಲೀಸ್ ಪೇದೆ ಎಂದು ತಿಳಿದುಬಂದಿದೆ. ಕಾರು ರಿವರ್ಸ್ ಮಾಡುವ ಸಂದರ್ಭದಲ್ಲಿ ಸಣ್ಣ ಸ್ಪರ್ಶವಾಗಿದ್ದು, ಇದರಿಂದ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ.
ಇಂತಹ ಘಟನೆಗಳು ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. “ಮಹಿಳೆಯೊಬ್ಬರು ಪುರುಷನ ಮೇಲೆ ಹಲ್ಲೆ ನಡೆಸುವುದು ಸರಿ ಅಲ್ಲ” ಎಂದು ಹಲವರು ಖಂಡಿಸಿದ್ದಾರೆ.
Bengaluru Woman Assaults Youth Over Parking Issue