ಬೆಂಗಳೂರು HSR ಲೇಔಟ್‌ನಲ್ಲಿ ನಿಧಿ ಆಸೆಗಾಗಿ ಅಪಾರ್ಟ್‌ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್!

ಬೆಂಗಳೂರು HSR ಲೇಔಟ್‌ನ ಎಳ್ಳುಕುಂಟೆಯಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಬಿಲ್ಡರ್ ಅಪಾರ್ಟ್‌ಮೆಂಟ್ ಬೇಸ್ಮೆಂಟ್ ಭಾಗವನ್ನು ಗುಪ್ತವಾಗಿ ಅಗೆದ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಪ್ರಶ್ನಿಸಿದ ನಂತರ ಪೊಲೀಸರಿಗೂ ಮಾಹಿತಿ ತಲುಪಿದೆ.

ಬೆಂಗಳೂರು (Bengaluru): ಬೆಂಗಳೂರು ನಗರದ HSR ಲೇಔಟ್‌ನ ಎಳ್ಳುಕುಂಟೆ ಪ್ರದೇಶದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನಿಧಿ ಸಿಗಬಹುದು ಎಂಬ ನಂಬಿಕೆಯಿಂದ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ಭಾಗವನ್ನು ಅಗೆದಿರುವ ಆರೋಪ ಬಿಲ್ಡರ್ ಸುಧಾಕರ್ ನಾಯ್ಡು ವಿರುದ್ಧ ಕೇಳಿಬಂದಿದೆ. ಈ ವಿಚಾರ ಹೊರಬಿದ್ದ ನಂತರ ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಮಾಹಿತಿಯ ಪ್ರಕಾರ, ಅಪಾರ್ಟ್‌ಮೆಂಟ್ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಇರುವುದರಿಂದ ಅದರ ಕೆಳಭಾಗದಲ್ಲಿ ಪುರಾತನ ನಿಧಿ ಇರಬಹುದು ಎಂಬ ನಂಬಿಕೆಯಲ್ಲಿ ಈ ಕಾರ್ಯ ನಡೆದಿದೆ ಎನ್ನಲಾಗಿದೆ. ಈ ನಂಬಿಕೆಯಿಂದ ಬಿಲ್ಡರ್ ಬೇಸ್ಮೆಂಟ್ ಭಾಗದ ಹಿಂಭಾಗವನ್ನು ಅಗೆಸಿದ್ದಾನೆ ಎಂಬುದು ಸ್ಥಳೀಯರ ಆರೋಪ.

ಸ್ಥಳೀಯರ ಗಮನಕ್ಕೆ ಬಾರದಂತೆ ಮಾಡಲು ಅಪಾರ್ಟ್‌ಮೆಂಟ್ ಕಾಂಪೌಂಡ್ ಸುತ್ತ ತಗಡಿನ ಶೀಟ್‌ಗಳನ್ನು ಹಾಕಿ ಮುಚ್ಚಿ ಅಗೆತ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳಿಂದ ನಡೆಯುತ್ತಿದ್ದ ಈ ಕಾರ್ಯವನ್ನು ಗಮನಿಸಿದ ನಿವಾಸಿಗಳು ನಂತರ ಪ್ರಶ್ನಿಸಿದಾಗ ಘಟನೆ ಬಹಿರಂಗವಾಗಿದೆ.

ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಅಗೆದಾಗ ನಿಧಿ ಪತ್ತೆಯಾದ ಸುದ್ದಿ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಅದೇ ರೀತಿಯ ನಿರೀಕ್ಷೆಯಲ್ಲಿ ಈ ರೀತಿ ಮಾಡಿದ್ದಾನೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಪೊಲೀಸರ ಪರಿಶೀಲನೆ

ಘಟನೆ ಕುರಿತು ಮಾಹಿತಿ ಸಿಕ್ಕ ತಕ್ಷಣ HSR ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಬಿಲ್ಡರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಕ್ರಮಗಳ ಕುರಿತು ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories