ಬೆಂಗಳೂರು: ರೈಲಿನಲ್ಲಿ ಜಗಳ, ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯನ್ನು ತಳ್ಳಿ ಹತ್ಯೆ
ಕುಳಿತುಕೊಳ್ಳುವ ವಿಚಾರಕ್ಕೆ ಜಗಳ ಬೆಳೆದು ದುರ್ಘಟನೆ. ಯಶವಂತಪುರ-ಬೀದರ್ ಎಕ್ಸ್ಪ್ರೆಸ್ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಸಹಪ್ರಯಾಣಿಕನೊಂದಿಗೆ ತಕರಾರು ಮಾಡಿಕೊಂಡು, ಆತನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ.
- ಕುಳಿತುಕೊಳ್ಳುವ ವಿಷಯಕ್ಕೆ ಜಗಳ, ಹತ್ಯೆ
- ರೈಲಿನಿಂದ ತಳ್ಳಿದ ಇಬ್ಬರು ಆರೋಪಿಗಳ ಬಂಧನ
- ರೈಲ್ವೇ ಪೊಲೀಸರಿಂದ ಮುಂದುವರೆದ ತನಿಖೆ
ಬೆಂಗಳೂರು (Bengaluru): ರೈಲಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳ ಬೆಳೆದು ಕೊನೆಗೆ ಕೊಲೆಯಲ್ಲಿ ಕೊನೆಗೊಂಡಿದೆ. ಹೌದು, ಯಶವಂತಪುರ-ಬೀದರ್ ಎಕ್ಸ್ಪ್ರೆಸ್ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಸಹಪ್ರಯಾಣಿಕನೊಂದಿಗೆ ತಕರಾರು ಮಾಡಿಕೊಂಡು, ಆತನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರ-ಬೀದರ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 28 ವರ್ಷದ ಕುಮಾರ್ ಸಾವಿಗಿಡಾದ ವ್ಯಕ್ತಿ. ಫೆಬ್ರವರಿ 11ರಂದು ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು, ದಟ್ಟಣೆಯಿಂದ ಶೌಚಾಲಯದ ಬಳಿ ಕುಳಿತುಕೊಳ್ಳಲು ಮುಂದಾದಾಗ ಇಬ್ಬರು ಸಹಪ್ರಯಾಣಿಕರು ಜಾಗ ನೀಡಲು ನಿರಾಕರಿಸಿದರು. ಇದರಿಂದ ವಾಗ್ವಾದ ತೀವ್ರಗೊಂಡಿತು.
ಕಲಬುರಗಿ ಜಿಲ್ಲೆಯ ಸೇಡಂ ಮೂಲದ ದೇವಪ್ಪ (45) ಹಾಗೂ ಪೀರಪ್ಪ (31) ಎಂಬ ಇಬ್ಬರು ಆರೋಪಿಗಳು ಕುಳಿತುಕೊಳ್ಳಲು ಬಂದ ಕುಮಾರ್ ಅವರೊಂದಿಗೆ ಜಗಳ ನಡೆಸಿದ ಬಳಿಕ, ಅವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದರೆಂದು ಹೇಳಲಾಗಿದೆ.
ಈ ಘಟನೆಯ ಮಾಹಿತಿ ರೈಲ್ವೇ ಕಂಟ್ರೋಲ್ ರೂಮ್ಗೆ ತಲುಪಿದ ನಂತರ, ಫೆ. 12ರಂದು ಯಲಹಂಕ-ಗೌರಿಬಿದನೂರು ಮಾರ್ಗದ ಮಧ್ಯೆ ಕುಮಾರ್ ಅವರ ಶವ ಪತ್ತೆಯಾಯಿತು.
ಪೊಲೀಸರ ಕಾರ್ಯಾಚರಣೆ:
ಘಟನೆ ನಡೆದ ತಕ್ಷಣವೇ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಕೊನೆಗೆ ದೊಡ್ಡಬಳ್ಳಾಪುರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ದೇವಪ್ಪ ಗಾರ್ಡನ್ ಕೆಲಸ ಮಾಡುತ್ತಿದ್ದರೆ, ಪೀರಪ್ಪ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ರೈಲ್ವೇ ಎಸ್ಪಿ ಡಾ. ಸೌಮ್ಯಲತಾ ಹೇಳಿಕೆ:
“ಅಪರಾಧಿಗಳು ರೈಲಿನಲ್ಲೇ ಜಗಳ ನಡೆಸಿದ ನಂತರ, ಕೃತ್ಯವೆಸಗಿದ್ದಾರೆ. ಇದೊಂದು ಉದ್ದೇಶಿತ ಕೊಲೆ ಎನ್ನುವಂತೆ ದೃಶ್ಯಗಳು ಇವೆ. ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ,” ಎಂದು ಅವರು ತಿಳಿಸಿದ್ದಾರೆ.
Fight Over Seat Leads to Murder on Train
Our Whatsapp Channel is Live Now 👇