ನಾಳೆ ಬೆಂಗಳೂರು ನಗರದ ಈ ರಸ್ತೆಯಲ್ಲಿ ಸಂಚಾರ ಬಂದ್; ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ
ಫ್ರೀಡಂ ಪಾರ್ಕ್ನಲ್ಲಿ ಮಾರ್ಚ್ 12ರಂದು ನಡೆಯುವ ಬೃಹತ್ ಪ್ರತಿಭಟನೆಯ ಹಿನ್ನೆಲೆ ಬೆಂಗಳೂರಿನ ಶೇಷಾದ್ರಿ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ. ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಬೆಂಗಳೂರು (Bengaluru): ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾರ್ಚ್ 12, 2026ರಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಕೇಂದ್ರ ಭಾಗದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸಾರ್ವಜನಿಕರ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ವಿಶೇಷವಾಗಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶೇಷಾದ್ರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣ ಜಾರಿಯಾಗಲಿದೆ.
ಯಾವ ಯಾವ ಪ್ರದೇಶಗಳಲ್ಲಿ ಪರಿಣಾಮ?
ಪ್ರತಿಭಟನೆ ನಡೆಯುವ ಫ್ರೀಡಂ ಪಾರ್ಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೆಜೆಸ್ಟಿಕ್, ಶಾಂತಲಾ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಚಾಲುಕ್ಯ ಸರ್ಕಲ್, ಕಾಳಿದಾಸ ರಸ್ತೆ, ಮೌರ್ಯ ಜಂಕ್ಷನ್ ಮತ್ತು ಸುಬ್ಬಣ್ಣ ಜಂಕ್ಷನ್ ಭಾಗಗಳಲ್ಲಿ ಸಂಚಾರ ವ್ಯತ್ಯಯ ಕಾಣಿಸಬಹುದು.
ಈ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಪ್ರಯಾಣಿಸುವುದು ಉತ್ತಮ ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಮೆಜೆಸ್ಟಿಕ್ – ಶಾಂತಲಾ ಜಂಕ್ಷನ್ ಭಾಗದ ಪರ್ಯಾಯ ಮಾರ್ಗ
ಮೆಜೆಸ್ಟಿಕ್ ಹಾಗೂ ಶಾಂತಲಾ ಜಂಕ್ಷನ್ ಭಾಗದಿಂದ ಆನಂದ್ ರಾವ್ ಫ್ಲೈಓವರ್ ಕಡೆಗೆ ತೆರಳುವ ವಾಹನಗಳು ಲುಲು ಮಾಲ್, ಕೆ.ಪಿ.ಎಂ ರಸ್ತೆ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್ ಹಾಗೂ ಶೇಷಾದ್ರಿಪುರಂ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ಈ ಮಾರ್ಗವನ್ನು ಬಳಸುವುದರಿಂದ ನಗರ ಕೇಂದ್ರ ಭಾಗದ ಟ್ರಾಫಿಕ್ ಗೊಂದಲವನ್ನು ತಪ್ಪಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಬ್ಯಾಂಕ್ – ಚಾಲುಕ್ಯ ಸರ್ಕಲ್ ಸಂಚಾರ ಬದಲಾವಣೆ
ಮೈಸೂರು ಬ್ಯಾಂಕ್ ಜಂಕ್ಷನ್ ಮೂಲಕ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳು ಸಾಗರ್ ಜಂಕ್ಷನ್, ಟಿ.ಬಿ ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆಯ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
ಇನ್ನೂ ಚಾಲುಕ್ಯ ಸರ್ಕಲ್ನಿಂದ ಮೈಸೂರು ಬ್ಯಾಂಕ್ ಕಡೆಗೆ ಬರುವವರು ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ ಹಾಗೂ ಇಂಡಿಯನ್ ಎಕ್ಸ್ಪ್ರೆಸ್ ಜಂಕ್ಷನ್ ಮಾರ್ಗವಾಗಿ ಪ್ರಯಾಣ ಮುಂದುವರಿಸಬಹುದು.
ಕಾಳಿದಾಸ ರಸ್ತೆ – ಮೌರ್ಯ ಜಂಕ್ಷನ್ ಮಾರ್ಗ
ಕಾಳಿದಾಸ ರಸ್ತೆ ಹಾಗೂ ಮೌರ್ಯ ಜಂಕ್ಷನ್ ಭಾಗದಲ್ಲಿ ಸಂಚರಿಸುವವರು ಕನಕದಾಸ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗರ್ ಜಂಕ್ಷನ್ ಕಡೆಗೆ ಸಾಗಬೇಕು. ಸುಬ್ಬಣ್ಣ ಜಂಕ್ಷನ್ ಭಾಗದಿಂದ ಬರುವ ವಾಹನಗಳು ಆನಂದ್ ರಾವ್ ಸರ್ಕಲ್ ಕಡೆಗೆ ತೆರಳುವಂತೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಪೊಲೀಸ್ ಮನವಿ
ಫ್ರೀಡಂ ಪಾರ್ಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆ ಇರುವುದರಿಂದ ಅನಿವಾರ್ಯವಲ್ಲದಿದ್ದರೆ ಈ ರಸ್ತೆಗಳತ್ತ ಪ್ರಯಾಣ ಮಾಡುವುದನ್ನು ತಪ್ಪಿಸುವುದು ಒಳಿತು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಅತ್ಯಾವಶ್ಯಕ ಪ್ರಯಾಣ ಇರುವವರು ಮಾತ್ರ ಈ ಮಾರ್ಗಗಳಲ್ಲಿ ಸಂಚರಿಸಬೇಕು ಮತ್ತು ಸೂಚಿಸಿದ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಟ್ರಾಫಿಕ್ ನಿಯಂತ್ರಣಕ್ಕೆ ಸಹಕರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.



