ಅಯ್ಯೋ ವಿಧಿಯೇ.. ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಜಲಸಮಾಧಿ
ಮಹಾರಾಷ್ಟ್ರದ ಅಮರಾವತಿಯಲ್ಲಿ ವಾಕಿಂಗ್ಗೆ ತೆರಳಿದ್ದ ನಾಲ್ವರು ಮಕ್ಕಳು ಕೆರೆಯಲ್ಲಿ ಸ್ನಾನಕ್ಕೆ ಇಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ

ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಸಂಭವಿಸಿದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಬೆಳಗಿನ ವೇಳೆ ಮನೆಯಿಂದ ಹೊರಟಿದ್ದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಖೋಲಾಪುರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಕ್ಕಳಾದ ಸೋನಾಲಿ ನರೇಂದ್ರ ಜೋಶಿ (16), ಆದಿತ್ಯ ನರೇಂದ್ರ ಜೋಶಿ (12), ಪಾಯಲ್ ಬಾಬ್ಲು ಪಂಡಿತ್ (21) ಹಾಗೂ ಯಶ್ ಗಜಾನನ್ ಕಾಕ್ನೆ (13) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಒಂದೇ ಕುಟುಂಬದವರಾಗಿರುವುದು ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಳಗ್ಗೆ ವಾಕಿಂಗ್ಗೆ ತೆರಳಿದ್ದ ಈ ಮಕ್ಕಳು ನಡೆದುಕೊಂಡು ಘಟ್ಖೇಡಾ ಕೆರೆಯ ಸಮೀಪಕ್ಕೆ ಬಂದಿದ್ದರು. ಅಲ್ಲಿನ ನೀರನ್ನು ನೋಡಿ ಸ್ನಾನ ಮಾಡುವ ಉತ್ಸಾಹದಲ್ಲಿ ಕೆರೆಯೊಳಗೆ ಇಳಿದಿದ್ದಾರೆ ಎನ್ನಲಾಗಿದೆ. ಆದರೆ ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ ಒಬ್ಬರ ಹಿಂದೆ ಒಬ್ಬರು ಮುಳುಗಿದ್ದಾರೆ.
ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಖೋಲಾಪುರಿ ಗೇಟ್ ಪೊಲೀಸರು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿತು. ಗ್ರಾಮಸ್ಥರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿ ನಾಲ್ವರ ಮೃತದೇಹಗಳನ್ನು ಹೊರತೆಗೆದರು.
ಘಟನೆ ವೇಳೆ ಅಲ್ಲಿ ಯಾವುದೇ ದೊಡ್ಡವರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸಮಯಕ್ಕೆ ಸಹಾಯ ಸಿಗದಿರುವುದೇ ಮಕ್ಕಳ ಪ್ರಾಣಾಪಾಯಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಬಳಿಕ ಪೋಷಕರು ಮಕ್ಕಳನ್ನು ಕೆರೆ, ನದಿ ಹಾಗೂ ನೀರಿನ ಪ್ರದೇಶಗಳ ಬಳಿ ಕಳುಹಿಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



