ಮುಂಬೈ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ
ಮುಂಬೈ ಕರಾವಳಿಯಲ್ಲಿ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ ಅಪಘಾತದ ಸಮಯದಲ್ಲಿ ದೋಣಿಯಲ್ಲಿ 114 ಪ್ರಯಾಣಿಕರಿದ್ದರು, ಅವರಲ್ಲಿ 101 ಮಂದಿಯನ್ನು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮುಂಬೈನಲ್ಲಿ ಸಂಭವಿಸಿದ ದೋಣಿ ಅಪಘಾತದಲ್ಲಿ (Mumbai Boat Accident) ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಅಪಘಾತದ ಸಮಯದಲ್ಲಿ ದೋಣಿಯಲ್ಲಿ 114 ಪ್ರಯಾಣಿಕರಿದ್ದರು, ಅವರಲ್ಲಿ 101 ಮಂದಿಯನ್ನು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಮೃತಪಟ್ಟ 13 ಮಂದಿಯಲ್ಲಿ 10 ಮಂದಿ ನಾಗರಿಕರು ಮತ್ತು ಮೂವರು ನೌಕಾಪಡೆಯ ಅಧಿಕಾರಿಗಳು. ಬುಧವಾರ ಮಧ್ಯಾಹ್ನ 3.55ಕ್ಕೆ ಮುಂಬೈ ಸಮೀಪದ ಬುಚರ್ ಐಲ್ಯಾಂಡ್ ಬಳಿ ಅಪಘಾತ ಸಂಭವಿಸಿದೆ.
ನೌಕಾಪಡೆಗೆ ಸೇರಿದ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ನೀಲ್ ಕಮಲ್ ಪ್ರಯಾಣಿಕ ನೌಕೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಹೋಗುತ್ತಿದ್ದಾಗ ದೋಣಿ ಅಪಘಾತಕ್ಕೀಡಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಭಾರತೀಯ ಕೋಸ್ಟ್ ಗಾರ್ಡ್ಸ್ ಮತ್ತು ನೌಕಾಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು. ಒಟ್ಟು 101 ಜನರನ್ನು ರಕ್ಷಿಸಲಾಗಿದೆ. ಉಳಿದ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರು ನೌಕಾಪಡೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ 11 ವಿಮಾನಗಳು ಮತ್ತು 4 ಹೆಲಿಕಾಪ್ಟರ್ಗಳನ್ನು ಬಳಸಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಹೇಳಿದ್ದಾರೆ.
ರಾತ್ರಿ 7.30ಕ್ಕೆ ಬಂದ ಮಾಹಿತಿ ಪ್ರಕಾರ ಅಪಘಾತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ನಾಳೆ ಬೆಳಗ್ಗೆಯೊಳಗೆ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.
ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಪೊಲೀಸರು ಮತ್ತು ನೌಕಾಪಡೆಯು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
Mumbai Boat Accident Death Toll Rises to 13, 101 Rescued