ತೋಟದಲ್ಲಿ ಎಮ್ಮೆ-ಕರುಗಳನ್ನು ಕಟ್ಟುತ್ತಿದ್ದ ವ್ಯಕ್ತಿಯ ಕತ್ತು ಸೀಳಿ ಬರ್ಬರ ಹತ್ಯೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಸಮೀಪದ ಲಕ್ಷ್ಮೇಗೌಡನದೊಡ್ಡಿಯಲ್ಲಿ ಇಂದು ಬೆಳಗ್ಗೆ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆಗೈದಿರುವ ಘಟನೆ ನಡೆದಿದೆ.
- ಕತ್ತು ಸೀಳಿ 47 ವರ್ಷದ ಕೃಷ್ಣೇಗೌಡ ಎಂಬಾತನ ಹತ್ಯೆ
- ದುಷ್ಕರ್ಮಿಗಳು ಕುತ್ತಿಗೆ ಸೀಳಿ ಬರ್ಬರ ಹತ್ಯೆ ಮಾಡಿ ಪರಾರಿ
- ತೋಟದ ಬಳಿ ಎಮ್ಮೆ-ಕರುಗಳನ್ನು ಕಟ್ಟುತ್ತಿದ್ದ ಸಂದರ್ಭ ದುರಂತ
ಮಂಡ್ಯ ಜಿಲ್ಲೆಯ (Mandya District) ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಸಮೀಪದ ಲಕ್ಷ್ಮೇಗೌಡನದೊಡ್ಡಿಯಲ್ಲಿ ಇಂದು ಬೆಳಿಗ್ಗೆ 47 ವರ್ಷದ ಎಲ್. ಕೃಷ್ಣೇಗೌಡ ಎಂಬುವವರನ್ನು ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಪ್ರತಿ ದಿನದಂತೆ ಇಂದು ಬೆಳಗ್ಗೆ ಕೃಷ್ಣೇಗೌಡ ತಮ್ಮ ತೋಟದ ಬಳಿ ಎಮ್ಮೆ-ಕರುಗಳನ್ನು ಕಟ್ಟುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿರಬಹುದು ಎಂದು ಅವರ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ತೋಟದಲ್ಲಿ ಹರಿದುಬಿದ್ದ ರಕ್ತದ ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರಿಗೆ ಚೂರಿ ಇರಿದ ರೌಡಿಶೀಟರ್
ಘಟನೆ ತಿಳಿಯುತ್ತಿದ್ದಂತೆ ಕೆ.ಎಂ. ದೊಡ್ಡಿ ಠಾಣೆಯ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಹತ್ಯೆಯ ಸತ್ಯಾಸತ್ಯತೆ ಮತ್ತು ಹಿನ್ನಲೆ ಇನ್ನೂ ತಿಳಿದುಬಂದಿಲ್ಲ. ಮೃತದೇಹವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಹತ್ಯೆಯಾದ ಕೃಷ್ಣೇಗೌಡ ಅವರಿಗೆ ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳು ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕೃತ್ಯದ ಹಿಂದೆ ವೈಯಕ್ತಿಕ ದ್ವೇಷವಿದೆಯಾ ಅಥವಾ ಬೇರೆ ಕಾರಣ ಇದೆಯಾ ಎಂಬುದನ್ನು ಪೊಲೀಸರು ಶೋಧಿಸುತ್ತಿದ್ದಾರೆ.
ಆರೋಪಿ ಪತ್ತೆಗೆ ಬಲೆ ಬೀಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Man murdered in Maddur, police begin investigation
Our Whatsapp Channel is Live Now 👇