ರೈತರಿಗೆ ಸುವರ್ಣಾವಕಾಶ: ಟ್ರ್ಯಾಕ್ಟರ್, ಹನಿ ನೀರಾವರಿಗೆ ಭರ್ಜರಿ ಸಬ್ಸಿಡಿ! ಅರ್ಜಿ ಆಹ್ವಾನ

2026-27ನೇ ಸಾಲಿನ ವಿವಿಧ ಕೃಷಿ ಮತ್ತು ತೋಟಗಾರಿಕೆ ಯೋಜನೆಗಳಡಿ ಟ್ರ್ಯಾಕ್ಟರ್, ಹನಿ ನೀರಾವರಿ, ಕೃಷಿಹೊಂಡ ಸೇರಿದಂತೆ ಹಲವು ಘಟಕಗಳಿಗೆ ಸಹಾಯಧನ ಪಡೆಯಲು ರೈತರಿಂದ ಜೂನ್ 15ರವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ತೋಟಗಾರಿಕೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 2026-27ನೇ ಸಾಲಿನ ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ವಿವಿಧ ಕೃಷಿ ಘಟಕಗಳಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಟ್ರ್ಯಾಕ್ಟರ್ ಖರೀದಿ, ಕೃಷಿಹೊಂಡ ನಿರ್ಮಾಣ, ಹನಿ ನೀರಾವರಿ, ತುಂತುರು ನೀರಾವರಿ, ಪ್ಲಾಸ್ಟಿಕ್ ಮಲ್ಚಿಂಗ್, ಪ್ಯಾಕ್ ಹೌಸ್, ಫಾರ್ಮ್ ಗೇಟ್, ಈರುಳ್ಳಿ ಶೇಖರಣಾ ಘಟಕ ಸೇರಿದಂತೆ ಹಲವು ಸೌಲಭ್ಯಗಳಿಗೆ ರೈತರು ಸಹಾಯಧನ ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

ಯಾವೆಲ್ಲ ಘಟಕಗಳಿಗೆ ಸಬ್ಸಿಡಿ?

ಹೊಸ ತೋಟಗಾರಿಕೆ ಪ್ರದೇಶಗಳ ವಿಸ್ತರಣೆಗೂ ಉತ್ತೇಜನ ನೀಡಲಾಗುತ್ತಿದೆ. ಮಾವು, ಸೀಬೆ, ಪಪ್ಪಾಯ, ಅಂಜೂರ, ದಾಳಿಂಬೆ, ನಿಂಬೆ, ಹುಣಸೆ, ಅಂಗಾಂಶ ಬಾಳೆ, ಕಂದು ಬಾಳೆ ಸೇರಿದಂತೆ ವಿವಿಧ ಹಣ್ಣು ಬೆಳೆಗಳಿಗೆ ನೆರವು ದೊರೆಯಲಿದೆ.

ಇದರ ಜೊತೆಗೆ ಹೈಬ್ರಿಡ್ ತರಕಾರಿ ಬೆಳೆ, ಹೂಗಾರಿಕೆ, ಔಷಧಿ ಸಸ್ಯಗಳು, ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ ಸೇರಿದಂತೆ ವಾಣಿಜ್ಯ ಬೆಳೆಗಳಿಗೂ ಅನುದಾನ ಲಭ್ಯವಿದೆ. ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ.

ಹನಿ ನೀರಾವರಿಗೆ ವಿಶೇಷ ಅನುದಾನ

ನೀರಿನ ಉಳಿತಾಯ ಮತ್ತು ಉತ್ತಮ ಉತ್ಪಾದನೆಗಾಗಿ ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಅಳವಡಿಸುವ ರೈತರಿಗೆ ವಿಶೇಷ ಸಹಾಯಧನ ನೀಡಲಾಗುತ್ತಿದೆ. ರೈತರ ಹೆಸರಲ್ಲಿ ಗರಿಷ್ಠ 5 ಹೆಕ್ಟೇರ್ ಜಮೀನು ಇದ್ದಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದು.

ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಅನುದಾನ ಸಿಗಲಿದ್ದು, ಅರ್ಹ ರೈತರಿಗೆ ಶೇ.45ರಿಂದ ಶೇ.90ರವರೆಗೆ ಸಹಾಯಧನ ನೀಡಲಾಗುತ್ತದೆ. ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳ ರೈತರಿಗೆ ಇದು ದೊಡ್ಡ ನೆರವಾಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ರೈತರು ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಆರ್.ಡಿ. ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರವನ್ನು ಕೂಡ ಲಗತ್ತಿಸಬೇಕು.

ಅರ್ಜಿದಾರರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ನೀರಾವರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರು ನೀರಿನ ಮೂಲ ಅಥವಾ ನೀರಾವರಿ ಸೌಲಭ್ಯ ಹೊಂದಿರುವುದು ಕಡ್ಡಾಯವಾಗಿದೆ.

ಜೂನ್ 15ರೊಳಗೆ ಅರ್ಜಿ ಸಲ್ಲಿಸಿ

ಗದಗ, ಕೋಲಾರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರಿಗೆ ಈ ಯೋಜನೆ ಅನ್ವಯವಾಗಲಿದೆ. ಮಾರ್ಗಸೂಚಿ ಪ್ರಕಾರ ಆಯ್ಕೆಯಾದ ಫಲಾನುಭವಿಗಳಿಗೆ ಜೇಷ್ಠತೆ ಹಾಗೂ ಆದ್ಯತೆಯ ಆಧಾರದ ಮೇಲೆ ಅನುದಾನ ಮಂಜೂರು ಮಾಡಲಾಗುತ್ತದೆ.

ಆಸಕ್ತ ರೈತರು ತಮ್ಮ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಜೂನ್ 15 ಕೊನೆಯ ದಿನವಾಗಿರುವುದರಿಂದ ರೈತರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಇಲಾಖೆ ಮನವಿ ಮಾಡಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories